This is a premium alert message you can set from Layout! Get Now!

ಚೇಂದಿರ ರಘು ತಿಮ್ಮಯ್ಯ, ಸಹಕಾರಿಗಳು: ಹುದಿಕೇರಿ. Hudikeri

0

ಚೇಂದಿರ ರಘು ತಿಮ್ಮಯ್ಯ, ಸಹಕಾರಿಗಳು: ಹುದಿಕೇರಿ. Hudikeri


ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೇಂದಿರ ರಘು ತಿಮ್ಮಯ್ಯನವರು  ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ನಮ್ಮ ಹಿರಿಯ ದೇಶಪ್ರೇಮಿಗಳ ಬಲಿದಾನಗಳಿಂದ ನಮಗೆ  ಸಿಕ್ಕಿದ ಸ್ವಾತಂತ್ರ್ಯವನ್ನು ವ್ಯರ್ಥಗೊಳಿಸದೆ ಈ ಅಖಂಡ ಭಾರತವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮ ಮೇಲಿದೆ ಎಂದ ಚೇಂದಿರ ರಘು ತಿಮ್ಮಯ್ಯನವರು, “ನಾನು ಸ್ವಪ್ರೇರಣೆಯಿಂದ ಸಮಾಜಸೇವೆಯೊಂದಿಗೆ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವುದಾಗಿ “ ಸರ್ಚ್‌ ಕೂರ್ಗ್‌ ಮೀಡಿಯಾ” ನಡೆಸಿದ ಸಂದರ್ಶನದಲ್ಲಿ ತಿಳಿಸಿದರು.

ಮೂರನೇ ತರಗತಿಯಲ್ಲಿ ಓದುತ್ತಿರುವಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಸ್ವಯಂ ಸೇವಕನಾಗಿ ತೊಡಗಿಸಿಗೊಂಡು ಸಮಾಜ ಸೇವೆ ಮಾಡುವ ಸಂಸ್ಕಾರವನ್ನು ಪಡೆದು ಕೊಂಡರು. ತದ ನಂತರ ಜೀವನ ರೂಪಿಸುವಲ್ಲಿ ಕೃಷಿಯನ್ನು ಆಯ್ಕೆಮಾಡಿಕೊಂಡು ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ನಿಟ್ಟಿನಲ್ಲಿ “ತಾನು ಪರರಿಗೆ-ಪರರು ತನಗೆ” ಎಂಬ ಸಹಕಾರ ತತ್ವದೊಂದಿಗೆ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು.   

ಕಳೆದ 24 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಚೇಂದಿರ ರಘು ತಿಮ್ಮಯ್ಯನವರು,  2018ರಲ್ಲಿ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿ ಆಯ್ಕೆಗೊಂಡು ನಿರ್ದೇಶಕರಾಗಿ ತದ ನಂತರ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.  

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2020-21 ರ ಸಾಲಿನಲ್ಲಿ 18 ಲಕ್ಷದ 69 ಸಾವಿರದ 923 ರೂಪಾಯಿಗಳಷ್ಟು ಲಾಭಗಳಿಸಿದೆ ಎಂದು ತಿಳಿಸಿದ ರಘು ತಿಮ್ಮಯ್ಯನವರು, ಸಂಘವು ದಾಖಲೆ ಮಟ್ಟದಲ್ಲಿ ಗೊಬ್ಬರ ಮಾರಾಟದಿಂದ ಲಾಭವನ್ನು ಹೊಂದಿದ್ದು, ಸಂಘದಿಂದ ನಡೆಸ್ಪಲ್ಪಡುತ್ತಿರುವ ಅಕ್ಕಿ ಗಿರಣಿಯಿಂದ ಲಾಭ,  ವಾಣಿಜ್ಯ ಮಳಿಗೆಗಳ ಬಾಡಿಗೆ ರೂಪದಲ್ಲಿ ಬರುವ ಆದಾಯದಿಂದ ಸಂಘವು ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಆಭರಣ ಸಾಲ, ಜಾಮೀನು ಸಾಲ, ವಾಹನ ಸಾಲ, ಕೆರೆ ಕಟ್ಟುವಿಕೆ, ಗೋದಾಮು ನಿರ್ಮಾಣಕ್ಕೆ, ಸ್ಪ್ರಿಂಕ್ಲರ್‌ ಖರೀದಿಸಲು, ಕಾಫಿ ಒಣಗಿಸುವ ಕಣ ನಿರ್ಮಾಣಕ್ಕೆ ಹಾಗೂ ತೋಟದ ಅಭಿವೃದ್ಧಿ ಮುಂತಾದ ಮಧ್ಯಮಾವಧಿ ಸಾಲಗಳನ್ನು ನಿಡಲಾಗುತ್ತದೆ. ಹಾಗೆ ಸ್ವಸಹಾಯ ಸಂಘಗಳಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಮುಂತಾದ ಹತ್ತು ಹಲವು ಸಾಲಗಳನ್ನು ಸಂಘದಿಂದ ವಿತರಿಸಲಾಗುತ್ತಿದೆ ಎಂದು ರಘು ತಿಮ್ಮಯ್ಯನವರು ತಿಳಿಸಿದರು.

ಅಧ್ಯಕ್ಷರಾಗಿ ತಮ್ಮ ಅಧಿಕಾರವಧಿಯಲ್ಲಿ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಡೆಸಲ್ಪಡುತ್ತಿರುವ ಅಕ್ಕಿ ಗಿರಣಿಯನ್ನು ಸಂಘದ ಸ್ವಂತ ಬಂಡವಾಳದಿಂದ ಮೇಲ್ದರ್ಜೆಗೇರಿಸುವಲ್ಲಿ ಕಾರ್ಯ ನಿರ್ವಹಣೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತದ ಯೋಜನೆ ಅಡಿಯಲ್ಲಿ ಸರಿ ಸುಮಾರು 80ಲಕ್ಷ ವೆಚ್ಚದಲ್ಲಿ 600 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಗೋದಾಮು ನಿರ್ಮಾಣ. ಸಂಘದ ಆವರಣದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಫಿ ಔಟ್‌ಟರ್ನ್‌ ಯಂತ್ರವನ್ನು ಅಳವಡಿಸಲಾಗಿದೆ. ಸದಸ್ಯರಿಗೆ ಸಂಘದಿಂದ ನೀಡುತ್ತಿರುವ ಬೆಳೆ ಸಾಲದ ಈ ಮೊದಲು 3 ಲಕ್ಷದವರಗೆ ಶೇಕಡ 0% ಬಡ್ಡಿ, ಹೆಚ್ಚುವರಿಯಾಗಿ 2 ಲಕ್ಷಕ್ಕೆ ಶೇಕಡ 9% ಬಡ್ಡಿಯಂತೆ ಒಟ್ಟು 5 ಲಕ್ಷದವರಗೆ ಸಾಲ. ರೂಪಾಯಿ 50 ಸಾವಿರದವರಗೆ ಗೊಬ್ಬರ ಸಾಲ. ಹಾಗೆ ಆಸ್ತಿ ಖರೀದಿ ಸಾಲ ಮತ್ತು ಆಭರಣ ಖರೀದಿ ಸಾಲಗಳ ಅಳವಡಿಕೆ. ಫಿಕ್ಷೆಡ್ ಡಿಪಾಸಿಟ್‌  60 ವರ್ಷ ಒಳಗಿನವರಿಗೆ ಶೇಕಡ 6.25% ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ ಶೇಕಡ 6.75% ಬಡ್ಡಿ ಮುಂತಾದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಮುಖ್ಯ ಕಾರ್ಯ ನಿರ್ವಾಣಾಧಿಕಾರಿ  ಹಾಗೂ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ನಿರ್ವಹಿಸಿರುವುದಾಗಿ ಚೇಂದಿರ ರಘು ತಿಮ್ಮಯ್ಯನವರು ತಿಳಿಸಿದರು.

ತಮ್ಮ ಮುಂದಿನ ಕ್ರಿಯಾಯೋಜನೆಗಳ ಬಗ್ಗೆ ತಿಳಿಸಿದ ರಘು ತಿಮ್ಮಯ್ಯನವರು, ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು  ಕಾಫಿ, ಭತ್ತ ಹಾಗೂ ಕರಿಮೆಣಸು ಅಡಮಾನ ಮಾಡಿ ಸಾಲ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ  ಕಾಫಿ, ಭತ್ತ ಹಾಗೂ ಕರಿಮೆಣಸು ದಾಸ್ತಾನು ಮಾಡಲು ಹೊಸದಾಗಿ ಗೋದಾಮು ನಿರ್ಮಾಣ ಕಾರ್ಯವು ಪ್ರಗತಿಯ ಹಂತದಲ್ಲಿದೆ, ಹಾಗೆ ಮತ್ತೊಂದು ಗೋದಾಮು ನಿರ್ಮಾಣ ಮಾಡುವ ಕುರಿತ ಕಾರ್ಯವು ಪ್ರಗತಿಯಲ್ಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಚೇಂದಿರ ರಘು ತಿಮ್ಮಯ್ಯನವರು, ತಿಳಿಸಿದರು.

“ತಾನು ಪರರಿಗೆ-ಪರರರು ತನಗೆ” ಎಂಬ ಸಹಕಾರ ತತ್ವದಂತೆ ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪವಿರಬಾರದು, ಸರ್ಕಾರದ ಮಾರ್ಗದರ್ಶನ ಮಾತ್ರ ಇರಬೇಕು, ಆಡಳಿತ ಮಂಡಳಿಗೆ ಆಂತರಿಕ ಸ್ವಾತಂತ್ರ್ಯ ನೀಡಬೇಕು ಎಂದು ಅಭಿಪ್ರಾಯಪಟ್ಟ ರಘು ತಿಮ್ಮಯ್ಯನವರು, ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು. ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಬಹುಮತದ ಬದಲು ಸರ್ವಾನುಮತ ಸಹಕಾರ ಕ್ಷೇತ್ರದಲ್ಲಿ ಇರಬೇಕು  ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ರಾಜಕೀಯ ರಹಿತವಾಗಿ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ಚೇಂದಿರ ರಘು ತಿಮ್ಮಯ್ಯನವರು,, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ಚೇಂದಿರ ರಘು ತಿಮ್ಮಯ್ಯನವರು ಪೊನ್ನಂಪೇಟೆ ತಾಲೂಕಿನ ಸಹಕಾರ ಭಾರತಿ  ಪ್ರಧಾನ ಕಾರ್ಯದರ್ಶಿ ಯಾಗಿ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹುದಿಕೇರಿ ಬಿ.ಜೆ.ಪಿ. ಸ್ಥಾನೀಯ ಸಮಿತಿಯ ಸದಸ್ಯರುಗಳಾಗಿ ಸೇವೆ ಸಲ್ಲಿಸಿದ್ದು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ 2008ರಿಂದ ಪೊನ್ನಂಪೇಟೆ ಗೋಲ್ಡನ್ ಜೆಸಿಐ ಸದಸ್ಯರಾಗಿ ನಾಲ್ಕು ಬಾರಿ ಸತತವಾಗಿ ಕೋಶಾಧಿಕಾರಿಯಾಗಿ ಹಾಗೆ ಪ್ರಸ್ತುತ ಜೆಸಿಐ ಸೀನಿಯರ್ ಮೆಂಬರ್ ಆಗಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಸ್ವಯಂ ಸೇವಕರಾಗಿದ್ದಾರೆ. ಬೇಗೂರು ಗ್ರಾಮದ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಇದರ ಸದಸ್ಯರಾಗಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಬೇಗೂರು ಫೂಳೆಮಾಡು ಈಶ್ವರ ದೇವಾಲಯದಲ್ಲಿ ಕಳೆದ 16 ವರ್ಷಗಳಿಂದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚೇಂದಿರ ರಘು ತಿಮ್ಮಯ್ಯನವರು ತಂದೆ  ಚೇಂದಿರ ಬಿ.ದೇವಯ್ಯ ತಾಯಿ ಚಿನ್ನಮ್ಮ ದಂಪತಿಯ ಪುತ್ರರಾಗಿದ್ದಾರೆ. ಪತ್ನಿ ಪ್ರಿಯಾ ಗೃಹಿಣಿಯಾಗಿದ್ದು ಹಿರಿಯ ಮಗಳು ಪ್ರಜ್ಞಾ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕಿರಿಯ ಮಗಳು ಪರ್ವ ವ್ಯಾಸಂಗ ನಿರತರಾಗಿದ್ದಾರೆ.

ಮೂಲತಃ ಕೃಷಿಕರಾಗಿರುವ ಚೇಂದಿರ ರಘು ತಿಮ್ಮಯ್ಯನವರು ಪ್ರಸ್ತುತ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚೇನಿವಾಡ ಬೇಗೂರು ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ರಾಜಕೀಯ,  ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 11-04-2022


Search Coorg Media

Coorg's Largest Online Media Network

"ಸರ್ಚ್‌ ಕೂರ್ಗ್‌ ಮೀಡಿಯಾ"

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.


Post a Comment

0 Comments
Post a Comment
To Top