ಕೆ.ಕೆ. ಹೇಮಂತ್ ಕುಮಾರ್‌, ಸಹಕಾರಿಗಳು: ಕೂಡುಮಂಗಳೂರು. Kudumangalore

ಕೆ.ಕೆ. ಹೇಮಂತ್ ಕುಮಾರ್‌, ಸಹಕಾರಿಗಳು: ಕೂಡುಮಂಗಳೂರು. Kudumangalore


ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಹಾಗೂ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ. ಹೇಮಂತ್ ಕುಮಾರ್‌ರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ತಂದೆಯವರಾದ ಎಂ.ಪಿ.ಕೃಷ್ಣಪ್ಪನವರು ಹಿರಿಯ ಸಹಕಾರಿಗಳಾಗಿದ್ದು, ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿಯೂ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ತಂದೆಯವರ ಸಹಕಾರ ಕ್ಷೇತ್ರದಲ್ಲಿನ ಸೇವೆಯಿಂದ ಪ್ರೇರಣೆಗೊಂಡು ಕೆ.ಕೆ. ಹೇಮಂತ್ ಕುಮಾರ್‌ರವರು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆಗೊಂಡರು.


ಕೆ.ಕೆ. ಹೇಮಂತ್ ಕುಮಾರ್‌ರವರ ತಂದೆ ಎಂ.ಪಿ ಕೃಷ್ಣಪ್ಪನವರು ಅಂದಿನ ದಿನಮಾನಗಳಲ್ಲಿ ದೀನ ದಲಿತರಿಗೆ ತಮ್ಮ ಸಾಮರ್ಥ್ಯ ಮೀರಿ ನೆರವಾಗುತ್ತಿದ್ದರು. ದೀನ ದಲಿತರ ಕಷ್ಟಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಾ ದೀನ ದಲಿತರು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಧೃಡವಾಗಲು ಅವರೊಂದಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದದನ್ನು ಮನಗಂಡ ಹೇಮಂತ್‌ ಕುಮಾರ್‌ರವರು ತಾನು ಕೂಡ  ದೀನ ದಲಿತರಿಗೆ ತನ್ನದಾದ ರೀತಿಯಲ್ಲಿ ನೆರವಾಗಬೇಕೆಂದು ನಿಶ್ಚಯಿಸಿ 2013ರಲ್ಲಿ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.


2013ರಲ್ಲಿ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ಕೆ.ಕೆ. ಹೇಮಂತ್ ಕುಮಾರ್‌ರವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ಸಂಘವು 34 ಕೋಟಿ ವಹಿವಾಟು ನಡೆಸುತ್ತಿತ್ತು. ಅದರಲ್ಲಿ 4 ಕೋಟಿ 24ಲಕ್ಷ ರೂಪಾಯಿಗಳಷ್ಟು ಸಾಲವನ್ನು ಸದಸ್ಯರಿಗೆ ವಿತರಿಸಲಾಗುತ್ತಿತ್ತು. ಅಲ್ಲಿಂದ ವರ್ಷದಿಂದ ವರ್ಷಕ್ಕೆ ಸಂಘವು ಅಭಿವೃದ್ದಿಗೊಂಡು ಇಂದು 2021ರಲ್ಲಿ 106ಕೋಟಿ ವಹಿವಾಟು ಹಾಗೂ ಸದಸ್ಯರಿಗೆ 23 ಕೋಟಿಯಷ್ಟು ಸಾಲವನ್ನು ನೀಡಲಾಗುತ್ತಿದೆ ಎಂದು ಕೆ.ಕೆ. ಹೇಮಂತ್‌ ಕುಮಾರ್‌ರವರು ತಿಳಿಸಿದರು. ‌


2017-18ರಿಂದ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು “ಎ” ತರಗತಿ ಯಲ್ಲಿ ಸಾಗುತ್ತಿದೆ ಎಂದ ಹೇಮಂತ್‌ ಕುಮಾರ್‌ರವರು, 2020-21ರ ಸಾಲಿನಲ್ಲಿ 34ಲಕ್ಷದ 47 ಸಾವಿರ ರೂಪಾಯಿಗಳಷ್ಟು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗುತ್ತಿದೆ ಎಂದರು. 2013ರಲ್ಲಿ ಸಂಘದ ಹೆಸರಿನಲ್ಲಿದ್ದ ಪಿಕ್ಸೆಡ್‌ ಡಿಪಾಜಿಟನ್ನು ತೆಗೆದು ಅದರಲ್ಲಿ ಸಂಘದ ಸದಸ್ಯರಿಗೆ ವ್ಯಾಪಾರಭಿವೃದ್ದಿಗಾಗಿ ತಿಂಗಳಿಗೆ ಶೇಕಡ 1.5% ಬಡ್ಡಿಯಂತೆ ಸಾಲವನ್ನು ವಿತರಿಸಲಾಗಿ ಸಂಘಕ್ಕೆ ಹೆಚ್ಚಿನ ಆಧಾಯವನ್ನು ಪಡೆಯಲು ಮಾರ್ಗ ಕಂಡುಕೊಂಡರು. ಇದರಿಂದ ಈ ಹಿಂದೆ ಸಂಘದ ಸದಸ್ಯರು ಇನ್ನಿತ್ತರ ಖಾಸಗಿ ಲೇವಾದೇವಿ ಸಂಸ್ಥೆಗಳಿಂದ ಅತೀ ಹೆಚ್ಚಿನ ಬಡ್ಡಿಯಿಂದ ಸಾಲವನ್ನು ಪಡೆದು ಹೈರಾಣಾಗುತ್ತಿದ್ದನ್ನು ಅಧ್ಯಕ್ಷರಾದ ಹೇಮಂತ್‌ ಕುಮಾರ್‌ರವರು ತಪ್ಪಿಸಿ ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟರು.


ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸದಸ್ಯರು ಹಾಗು ಇತರೆ ಗ್ರಾಹಕರು ಪಡೆದಿದ್ದ ಸಾಲಗಳ ಶೇಕಡ 99%ರಷ್ಟು ಸಕಾಲ ಮರು ಪಾವತಿ ಪ್ರಮುಖ ಕಾರಣ ಎಂದ ಹೇಮಂತ್‌ ಕುಮಾರ್‌ರವರು, ಹಾಗೆ ಸಂಘದಿಂದ ನೀಡಲ್ಲಪಡುತ್ತಿರುವ ಜಾಮೀನು ಸಾಲ, ಗೊಬ್ಬರ ಸಾಲ, ಪಿಗ್ಮಿ O.D. ಸಾಲ, ಆಭರಣ ಸಾಲ, ವಾಹನ ಖರೀದಿ ಸಾಲ, ವಾಣಿಜ್ಯ ಮಳಿಗೆಗಳಿಂದ ಬರುವ ಬಾಡಿಗೆ ರೂಪದ ಆದಾಯ ಹಾಗೂ ನ್ಯಾಯ ಬೆಲೆ ಅಂಗಡಿಗಳಿಂದ ದೊರೆಯುವ ಆದಾಯ ಮುಂತಾದವುಗಳಿಂದ ಸಂಘವು ಲಾಭವನ್ನು ಹೊಂದಿದ್ದೆ ಎಂದು ತಿಳಿಸಿದರು.


2013ರಲ್ಲಿ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಗದು ಏಣಿಕೆ ಯಂತ್ರ, ಜೆರಾಕ್ಸ್ ಯಂತ್ರ, ಛಾಪಾಕಾಗದ ವಿತರಣೆ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕೃತಗೊಳಿಸಲಾಗಿದೆ ಎಂದ ಹೇಮಂತ್‌ ಕುಮಾರ್‌ರವರು, ಸಂಘದ ಹದ್ದುಬಸ್ತು ದುರಸ್ಥಿ ಮಾಡಲಾಗಿ 11ಇ ನಕ್ಷೆಯಲ್ಲಿ ಸೇರಿಸಲಾಗಿದೆ ಎಂದರು. 


ಹೇಮಂತ್‌ ಕುಮಾರ್‌ರವರು ಆಡಳಿತ ಮಂಡಳಿಯ ಹಾಗೂ ಸದಸ್ಯರ ಸಹಕಾರವನ್ನು ಪಡೆದು ಕೊಂಡು ರಾಷ್ಟ್ರೀಕೃತ ಬ್ಯಾಂಕಿನ ರೀತಿಯಲ್ಲಿ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಅಭಿವೃದ್ಧಿ ಮಾಡಿದ್ದಾರೆ. ಹಾಗೆ ಸ್ಥಳೀಯ ಸೀಗೆಹೊಸೂರು ಗ್ರಾಮದಲ್ಲಿ 2ಏಕರೆ 30ಸೆಂಟ್‌ ಜಾಗವನ್ನು ತಮ್ಮ ಅಧಿಕಾರವಧಿಯಲ್ಲಿ ಸಂಘಕ್ಕೆ ಖರೀದಿಸಿದ್ದಾರೆ.


ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಬ್ಸಿಡಿ ನೀಡಿ ಸಾಲದ ರೂಪದಲ್ಲಿ ಕೃಷಿ ಪರಿಕರಗಳನ್ನು ನೀಡುವ ಕ್ರೀಯಾಯೋಜನೆಯನ್ನು ಕೈಗೊಳ್ಳಲಾಗಿದೆ ಎಂದ ಹೇಮಂತ್‌ ಕುಮಾರ್‌ರವರು, ಕೀಟನಾಶಕ ಮಳಿಗೆ, ಸರ್ವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತವಾದ ಹೈಟೆಕ್ ಸಮುದಾಯ ಭವನವನ್ನು ನಿರ್ಮಿಸುವ ಕಾರ್ಯ ನಮ್ಮ ಮುಂದಿದೆ ಎಂದರು. ಹಾಗೆ ಆರ್ಥಿಕವಾಗಿ ತೊಂದರೆಯಲ್ಲಿರುವ ಸದಸ್ಯರಿಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಮ್ಮ ಮುಂದಿನ ಕ್ರೀಯಾ ಯೋಜನೆಗಳ ಬಗ್ಗೆ ವಿವರಿಸಿದರು. 


ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ಹೇಮಂತ್‌ ಕುಮಾರ್‌ರವರು, ತಿಳಿಸಿದರು.


ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದ ಹೇಮಂತ್‌ ಕುಮಾರ್‌ರವರು, ಸರ್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.  


ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ  ಭಾವಿ ಯುವಶಕ್ತಿಗೆ ಹೇಮಂತ್‌ ಕುಮಾರ್‌ರವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.


ಸಹಕಾರ ಕ್ಷೇತ್ರದಲ್ಲಿ 2018 ರಿಂದ ಪ್ರಸ್ತುತ ಕೊಡಗು ಜಿಲ್ಲೆಯ ಏಕೈಕ ಪ್ರತಿನಿಧಿಯಾಗಿ ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಹೇಮಂತ್‌ ಕುಮಾರ್‌ರವರು, ಜೆಡಿಎಸ್‌ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕೂಡುಮಂಗಳೂರು ದೊಡ್ಡಮ್ಮ ತಾಯಿ ದೇವಾಲಯದ ಸೇವಾ ಸಮಿತಿಯ ನಿರ್ದೆಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕುಶಾಲನಗರದ ಅನುಗ್ರಹ ಎಜುಕೇಷನಲ್‌ ಸೊಸೈಟಿಯ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಮೂಲತ: ಕೃಷಿಕರಾಗಿರುವ ಹಾಗೂ ಉದ್ಯಮಿಯಾಗಿರುವ ಹೇಮಂತ್‌ ಕುಮಾರ್‌ರವರು, ತಂದೆ ಎಂ.ಪಿ.ಕೃಷ್ಣಪ್ಪ ಹಾಗೂ ತಾಯಿ ಯಶೋದಮ್ಮ ದಂಪತಿಯ ಹಿರಿಯ ಪುತ್ರರಾಗಿದ್ದಾರೆ. ಪತ್ನಿ ಕಲ್ಪಶ್ರೀ ಗೃಹಿಣಿಯಾಗಿದ್ದಾರೆ. ಮಗಳು ನೇಹಾ ಗೌಡ ದ್ವಿತೀಯ ಪಿ.ಯು.ಸಿ. ವ್ಯಾಸಂಗ ನಿರತರಾಗಿದ್ದಾರೆ. ಮಗ ಸೋಹನ್‌ ಗೌಡ 7ನೇ ತರಗತಿಯಲ್ಲಿ ವ್ಯಾಸಂಗ ನಿರತರಾಗಿದ್ದಾರೆ.

ಕೆ.ಕೆ.ಹೇಮಂತ್ ಕುಮಾರ್‌ರವರು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೂಡುಮಂಗಳೂರು ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.


ಸಂದರ್ಶನದ ದಿನಾಂಕ: 09-11-2021


Search Coorg Media

Coorg's Largest Online Media Network 

Post a Comment

Previous Post Next Post