ನೆರವಂಡ ಡಿ.ಪೂಣಚ್ಚ( ಸಂಜಯ್), ಸಹಕಾರಿಗಳು: ಹೊದ್ದೂರು - Hoddur

ನೆರವಂಡ ಡಿ.ಪೂಣಚ್ಚ( ಸಂಜಯ್), ಸಹಕಾರಿಗಳು: ಹೊದ್ದೂರು - Hoddur



ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಪಟ್ಟಣದಿಂದ ನಾಪೋಕ್ಲು ಪಟ್ಟಣವನ್ನು ಸಂಪರ್ಕಿಸುವ ರಸ್ತೆಯ ನಡುವಿನಲ್ಲಿ ಸಿಗುವ ಹೊದ್ದೂರು ಗ್ರಾಮದವರಾದ ನೆರವಂಡ ಡಿ.ಪೂಣಚ್ಚ( ಸಂಜಯ್)ರವರು ಪ್ರಸ್ತುತ ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಸರಿಸುಮಾರು ಮೂವತ್ತು ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನೆರವಂಡ ಸಂಜಯ್‌ರವರು 2014ರಲ್ಲಿ ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು 2019ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತದ ನಂತರ 2019ರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಮರಳಿ ಅಧ್ಯಕ್ಷರಾಗಿ ಆಯ್ಕೆಗೊಂಡು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.


ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ನೆರವಂಡ ಸಂಜಯ್ ರವರು ತಮ್ಮ 18ನೇ ವರ್ಷಕ್ಕೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಆಮೇಲೆ ಅಲ್ಲಿಂದಲೇ ಸೇವಾ ಮನೋಭಾವದಿಂದ ಸಹಕಾರ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡರು.


ಹೊದ್ದೂರು ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ  ಸಂಘವು 2019-20 ರಲ್ಲಿ 11.50 ಲಕ್ಷ ಲಾಭದಲ್ಲಿದ್ದು, ಸಂಘದಿಂದ ಸದಸ್ಯರು ಪಡೆದ ವಿವಿಧ ರೀತಿಯ ಸಾಲಗಳ ಸಕಾಲದ ಮರುಪಾವತಿಯಿಂದ ಸಂಘ ಲಾಭವನ್ನು ಪಡೆದಿದೆ ಎಂದು ಸಂಜಯ್ ತಿಳಿಸಿದರು.


ನಮ್ಮ ಸಹಕಾರ ಸಂಘದಿಂದ ಜಾಮೀನು ಸಾಲ, ಆಭರಣ ಸಾಲ, ಗೊಬ್ಬರ ಸಾಲ ಹಾಗೂ ಮಧ್ಯಮಾವಧಿ ಸಾಲವನ್ನು ನೀಡಲಾಗುತ್ತಿದ್ದು, ಬರುವ ಬಡ್ಡಿಯಿಂದ ಸಂಘ ಲಾಭಗಳಿಸಿ ಪ್ರಗತಿಯತ್ತ ಸಾಗುತ್ತಿದೆ ಎಂದ ನೆರವಂಡ ಸಂಜಯ್, ಸಿಮೆಂಟ್ ಮಾರಾಟ, ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ ಹಾಗೆ ಸುಮಾರು 30ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡಲಾಗುತ್ತಿದ್ದು, ಇದರಿಂದಲೂ ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಾಭದ ಹಾದಿಯಲ್ಲಿ ಇದೆ ಎಂದು ಸಂಜಯ್‌ ತಿಳಿಸಿದರು.


ನೆರವಂಡ ಡಿ.ಪೂಣಚ್ಚ(ಸಂಜಯ್)ರವರ ಅಧ್ಯಕ್ಷತೆಯ ಅವಧಿಯಲ್ಲಿ ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮ ಆಡಳಿತ ನಿರ್ವಹಣೆಗಾಗಿ ಕೊಡಗು ಡಿ.ಸಿ.ಸಿ. ಬ್ಯಾಂಕ್‌ನಿಂದ ಹಾಗೂ ಅಪೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಹಾಗೂ 2015ರಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಘದ ನೂತನ ಆಡಳಿತ ಕಚೇರಿ ಕಟ್ಟಡ, ಗೋದಾಮು ವಾಣಿಜ್ಯ ಮಳಿಗೆಯು ಇವರ ಅಧ್ಯಕ್ಷ ಅವಧಿಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿತ್ತು.


ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಉತ್ತಮವಾಗಿದೆ ಎಂದ ನೆರವಂಡ ಸಂಜಯ್‌ರವರು, ಹೊದ್ದೂರು ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ  ಸಂಘವು ಕುಂಬಳದಾಳು, ಹೊದವಾಡ, ಹೊದ್ದೂರು, ವಾಟೆಕಾಡು ಹಾಗೂ ಕಬಡಗೇರಿ ಗ್ರಾಮಗಳ ವ್ಯಾಪ್ತಿಯ ರೈತರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಹೊದ್ದೂರು ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ  ಸಂಘದ  ಪಕ್ಕದಲ್ಲಿರುವ ಹಳೆಯ ಕಟ್ಟಡವನ್ನು ಕೆಡವಿ ಗೋದಾಮು, ಸಭಾಂಗಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ ಎಂದು ನೆರವಂಡ ಸಂಜಯ್‌ರವರು ತಮ್ಮ ಮುಂದಿರುವ ಕ್ರಿಯಾ ಯೋಜನೆಯ ಬಗ್ಗೆ ಈ ಸಂದರ್ಭದಲ್ಲಿ ತಿಳಿಸಿದರು.


ಸಹಕಾರ ಸಂಘಗಳು ಉಳಿಯಲು ಸರ್ಕಾರದ ಹಸ್ತಕ್ಷೇಪ ಪೂರ್ಣಮಟ್ಟದಲ್ಲಿ ಇರಬಾರದು ಎಂದ ಸಂಜಯ್‌ರವರು ಪಾರದರ್ಶಕ ಆಡಳಿತವಿದ್ದಲ್ಲಿ ಸಹಕಾರ ಸಂಘ ಲಾಭವನ್ನು ಪಡೆದು ಪ್ರಗತಿಯತ್ತ ಸಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಸಹಕಾರ ಕ್ಷೇತ್ರಕ್ಕೆ ಯುವ ಜನಾಂಗವು ಸೇವಾ ಮನೋಭಾವ ಹಾಗೂ ಸ್ವಾರ್ಥರಹಿತ ಮನೋಭಾವದಿಂದ ಹೆಚ್ಚುಹೆಚ್ಚು ಪಾಲ್ಗೊಳ್ಳುವಂತಾಗಬೇಕು ಎಂದು, ಸಹಕಾರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಲಿರುವ ಯುವಶಕ್ತಿಗೆ ತಮ್ಮ ಸಂದೇಶವನ್ನು ತಿಳಿಸಿದರು.


ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನೆರವಂಡ ಸಂಜಯ್‌ರವರು ಹೊದ್ದೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನರು, ಬಿಜೆಪಿ ಮಡಿಕೇರಿ ತಾಲೂಕು ಸಮಿತಿಯ ಖಜಾಂಚಿಯಾಗಿ, ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ.


ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಂಜಯ್‌ರವರು ಹೊದ್ದೂರು ಶ್ರೀ ಭಗವತಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರಾಗಿದ್ದಾರೆ.


ಮೂಲತಃ ಕೃಷಿಕರಾಗಿರುವ ನೆರವಂಡ ಪೂಣಚ್ಚ(ಸಂಜಯ್‌)ರವರು ಹೊದ್ದೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ನೆರವಂಡ ದೇವಯ್ಯ ಹಾಗೂ 78 ವರ್ಷ ಪ್ರಾಯದ ಕಸ್ತೂರಿ ದಂಪತಿಗಳ ಪುತ್ರರಾಗಿದ್ದಾರೆ. ತಾಯಿ ಕಸ್ತೂರಿ, ಪತ್ನಿ ಮೋನಿತಾ, ಮಕ್ಕಳಾದ  ಯಾನ ಪೊನ್ನಮ್ಮ, ಜಿಯಾ ಬೋಜಮ್ಮ ಕುಟುಂಬದೊಂದಿಗೆ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದ್ದೂರು ಗ್ರಾಮದಲ್ಲಿ ನಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ”  ಹಾರೈಸುತ್ತದೆ.



ಸಂದರ್ಶನ ದಿನಾಂಕ: 18-03-2021



Search Coorg Media

Coorg's Largest Online Media Network 




Post a Comment

Previous Post Next Post