ತಳೂರು ಕಿಶೋರ್ ಕುಮಾರ್, ಸಹಕಾರಿಗಳು: ಬೆಟ್ಟಗೇರಿ - Betageri

ತಳೂರು ಕಿಶೋರ್ ಕುಮಾರ್, ಸಹಕಾರಿಗಳು: ಬೆಟ್ಟಗೇರಿ - Betageri


ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರವತ್ತೊಕ್ಕಲು ಗ್ರಾಮದವರಾದ ತಳೂರು ಕಿಶೋರ್ ಕುಮಾರ್ ಅವರು ಪ್ರಸ್ತುತ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ತಮ್ಮ ಕಾಲೇಜು ಜೀವನದಲ್ಲಿ ಇದ್ದಾಗಲೇ ಬೆಟ್ಟಗೇರಿ ವಿ.ಎಸ್.ಎಸ್.ಎನ್. ಬ್ಯಾಂಕ್‌ನ  ಆಡಳಿತ ಕೆಲವರ ಕೈಯಲ್ಲಿ ವಿಕೇಂದ್ರೀಕರಣಗೊಂಡು ಗ್ರಾಮದ ಸರ್ವರಿಗೂ ಸಹಕಾರ ಸಂಘದಲ್ಲಿ ಪಾಲ್ಗೊಳ್ಳಲು ಅವಕಾಶ ವಂಚಿತರಾಗಿ ಇರುವುದನ್ನು ಮನಗಂಡ ಕಿಶೋರ್ ಕುಮಾರ್ 1988 ರಲ್ಲಿ ವಿ.ಎಸ್.ಎಸ್.ಎನ್. ಬ್ಯಾಂಕಿನ ಸದಸ್ಯತ್ವವನ್ನು ಪಡೆದುಕೊಂಡು 1990 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡರು ಆಗ ಕಿಶೋರ್ ರವರಿಗೆ 24 ವರ್ಷದ ಹರೆಯ.


1990 ರಿಂದ ಸಾವಿರ 1996ರವರಗೆ,  2011 ರಿಂದ 2014ರವರಗೆ, 2014ರಿಂದ 2018 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಿಶೋರ್ ಕುಮಾರ್ ಅವರು 2000 ರಿಂದ ಪುನಃ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಿಶೋರ್ ಕುಮಾರ್ ರವರು ಅಧ್ಯಕ್ಷ ಅವಧಿಯಾದ 2019-20ರಲ್ಲಿ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 9ಲಕ್ಷದ 22 ಸಾವಿರ ಲಾಭವನ್ನು ಗಳಿಸಿದೆ. ಸಂಘದ ಲಾಭದ ಹಿಂದೆ ಸಕಾಲಕ್ಕೆ ಸಾಲಗಳ ಮರುಪಾವತಿ ಕಾರಣವಾಗಿದ್ದು, ಸಂಘವು ಪ್ರಗತಿಯ ಹಾದಿಯಲ್ಲಿದೆ ಎಂದು ಕಿಶೋರ್ ಕುಮಾರ್ ಅವರು ತಿಳಿಸಿದರು. 


ಬೆಟ್ಟಗೇರಿ ಗ್ರಾಮವು ಮಡಿಕೇರಿ ಭಾಗಮಂಡಲದ ಹೆದ್ದಾರಿಯಲ್ಲಿರುವ ಕಾರಣ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಹಾಗೂ ಸುರತ್ಕಲ್‌ನ ಕಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೀತಿಯಲ್ಲಿ ಆಧುನೀಕರಣಗೊಳಿಸುವ ಕ್ರಿಯಾಯೋಜನೆಯನ್ನು ನಮ್ಮ ಮುಂದಿದೆ ಎಂದು ತಳೂರು ಕಿಶೋರ್ ಕುಮಾರ್ ರವರು ತಿಳಿಸಿದರು.


ಬೆಟ್ಟಗೇರಿ ಸಹಕಾರ ಸಂಘವು ಡಿಜಿಟಲ್ ಬ್ಯಾಂಕಿಂಗ್, ಆನ್ಲೈನ್ ಬ್ಯಾಂಕಿಂಗ್ ಮುಂತಾದ ಹತ್ತು ಹಲವು ರೀತಿಯಲ್ಲಿ ರೈತರಿಗೆ ಅನುಕೂಲವಾಗುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ತಳೂರು ಕಿಶೋರ್ ಕುಮಾರ್ ತಿಳಿಸಿದರು. ಸುಮಾರು 1 ಕೋಟಿ ವೆಚ್ಚದಲ್ಲಿ ಸಹಕಾರ ಸಂಘದ ಬ್ಯಾಂಕಿನ ಆಡಳಿತ ಕಚೇರಿ, ಸಭಾಂಗಣ, ವಾಣಿಜ್ಯ ಸಂಕೀರ್ಣ, ಲಾಕರ್ ವ್ಯವಸ್ಥೆ ಮುಂತಾದವುಗಳನ್ನು ಮಾಡುವ ಕಾರ್ಯ ಇದೀಗ ಪ್ರಗತಿಯಲ್ಲಿದೆ ಎಂದು ಕಿಶೋರ್ ಕುಮಾರ್ ತಿಳಿಸಿದರು


ಬೆಟ್ಟಗೇರಿ ಗ್ರಾಮದ ಸಾರ್ವಜನಿಕರು, ಸಹಕಾರ ಸಂಘದ ಸದಸ್ಯರು ಹಾಗೂ ಭಾಗಮಂಡಲ-ತಲಕಾವೇರಿಗೆ ಆಗಮಿಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಟ್ಟಗೇರಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ಪೆಟ್ರೋಲ್ ಬಂಕ್ ಪ್ರಾರಂಭದಲ್ಲಿ ಪ್ರಯತ್ನ ಸಾಗಿದೆ ಎಂದು ಕಿಶೋರ್ ಕುಮಾರ್ ಮಾಹಿತಿ ನೀಡಿದರು.


ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದಲ್ಲಿದ್ದು, ಪ್ರಗತಿಯ ಹಾದಿಯಲ್ಲಿದೆ. ಇವೆಲ್ಲಕ್ಕೂ ಬ್ಯಾಂಕಿನ ಆಡಳಿತ ಮಂಡಳಿ, ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರ ಸಹಕಾರ ತೃಪ್ತಿದಾಯಕವಾಗಿದೆ ಎಂದು ಅಧ್ಯಕ್ಷರಾದ ತಳೂರು ಕಿಶೋರ್ ಕುಮಾರ್ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.


ಸರ್ಕಾರದ ಕೆಲವೊಂದು ನಿಯಮಗಳು ಸಹಕಾರ ಸಂಘಗಳು ಅಭಿವೃದ್ಧಿಯ ಪಥದೆಡೆಗೆ ಸಾಗಲು ಅಡಚಣೆ ಉಂಟು ಮಾಡುತ್ತಿದ್ದು, ಸಹಕಾರ ಸಂಘವು ಪೂರ್ಣಪ್ರಮಾಣದಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯವರಿಗೆ ಅಧಿಕಾರ ನೀಡುವಂತಾಗಬೇಕೆಂದು  ಕಿಶೋರ್ ಕುಮಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ರೈತರು ಸಹಕಾರ ಸಂಘದಲ್ಲಿ ಪೂರ್ಣಪ್ರಮಾಣದಲ್ಲಿ ಪಾಲ್ಗೊಂಡು ಸಂಘದ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಆಗ ಸಹಕಾರ ಸಂಘ ಅಭಿವೃದ್ಧಿಯಾಗಲು ಸಾಧ್ಯ ಎಂದು ಈ ಸಂದರ್ಭ ನುಡಿದರು.


ಸಹಕಾರ ಸಂಘದಲ್ಲಿ ಯುವಶಕ್ತಿಯ ಪಾಲ್ಗೊಳ್ಳುವಿಕೆ ಹೆಚ್ಚೆಚ್ಚು ಆಗಬೇಕು ಎಂದ ಕಿಶೋರ್ ಕುಮಾರ್ ಅವರು ಇಂದಿನ ದಿನಮಾನಗಳಲ್ಲಿ ಯುವಶಕ್ತಿ ದುಶ್ಚಟಗಳಿಗೆ ದಾಸರಾಗಿ ಹಾದಿ ತಪ್ಪುತ್ತಿದ್ದಾರೆ. ಯುವ ಶಕ್ತಿ ಸಹಕಾರ ಸಂಘಗಳಲ್ಲಿ ತೊಡಗಿಕೊಂಡು ಚಟುವಟಿಕೆಯಿಂದ ಕೂಡಿ ತಮ್ಮ ಹಾಗೂ ದೇಶದ ಪ್ರಗತಿಗೆ ಜೊತೆಗೂಡಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ತಳೂರು ಕಿಶೋರ್ ಕುಮಾರ್ ರವರು ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ, ಕೊಡಗು ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾಗಿ ಸಂಪಾಜೆ ಫ್ಯಾಕ್ಸ್ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ. ಉತ್ತಮ ಆಡಳಿತಕ್ಕಾಗಿ ಅಪೆಕ್ಸ್ ಬ್ಯಾಂಕ್ ನಿಂದ ಪ್ರಶಸ್ತಿ, ಕೊಡಗು ಡಿ.ಸಿ.ಸಿ. ಬ್ಯಾಂಕ್‌ನಿಂದ ಹಲವು ಬಾರಿ ಪ್ರಶಸ್ತಿಗಳನ್ನು ಇವರ ಅಧಿಕಾರವಧಿಯಲ್ಲಿ ಬೆಟ್ಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದೊರಕಿದೆ.


ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು ತಳೂರು ಕಿಶೋರ್ ಕುಮಾರ್ ರವರು ಬಿ.ಜೆ.ಪಿ. ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಯ ಮಾಜಿ ಅಧ್ಯಕ್ಷರಾಗಿ, ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ, ಸಂಸದರ ಕೊಡಗು ಜಾಗೃತಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ತಳೂರು ಕಿಶೋರ್ ಕುಮಾರ್ ಬೆಟ್ಟಗೇರಿಯ ಉದಯ ಪ್ರೌಢಶಾಲೆಯಲ್ಲಿ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಕೃಷಿಕರಾಗಿರುವ ಕಿಶೋರ್ ಕುಮಾರ್ ಕುಮಾರ್ ಮಾಜಿ ಸೈನಿಕರಾಗಿದ್ದ ದಿವಂಗತ ತಳೂರು ಅಚ್ಚಯ್ಯ ಹಾಗೂ 95 ವರ್ಷ ಪ್ರಾಯದ ತಾಯಿ ಬೊಳ್ಳವ್ವ ದಂಪತಿಗಳ ಮಗನಾಗಿದ್ದರೆ. ಪತ್ನಿ ಸ್ವರ್ಣ ಕಿಶೋರ್ ಕುಮಾರ್ ಸುಳ್ಯದ ಶಾರದ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವ ಮಗ ಸೋಹನ್ ಪತ್ನಿ ಮತ್ತು ತಾಯಿಯೊಂದಿಗೆ ಬೆಟ್ಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅರವತ್ತೊಕ್ಕಲು  ಗ್ರಾಮದಲ್ಲಿ ನಲೆಸಿದ್ದಾರೆ. ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು “ಸರ್ಚ್‌ ಕೂರ್ಗ್‌ ಮೀಡಿಯಾ” ಆಶಿಸುತ್ತದೆ.


ಸಂದರ್ಶನದ ದಿನಾಂಕ: 01-03-2021


Search Coorg Media

Coorg's Largest Online Media Network 


Post a Comment

Previous Post Next Post